Sunday 12 March 2017

ಬಾಲ್ಯತನ


ಬಾಲ್ಯದ ನೆನಪುಗಳು 
ಮರೆಯಲಾಗದ ಕ್ಷಣಗಳು 
ತುಂಬು ಗರ್ಭಿಣಿ ಚಿಟ್ಟೆಗೆ
ಹೂವು ದಳಹಾಸಿ ಹೆರಿಗೆ ಮಾಡಿದ್ದು
ಮುಂಜಾನೆಯ ಗಾಳಿಯ ಕಣ್ಣೀರು
ಎಲೆಯ ಮೇಲೆ ಕುಳಿತು ನಗುತ್ತಿದ್ದುದ್ದು
ಹಾಡುತ್ತ ಬರುತ್ತಿದ್ದ ದುಂಬಿಗೆ
ತೆಂಗಿನ ಮರ ನೀರಾ ಕುಡಿಸಿದ್ದು
ಉದ್ದ ಬಾಲದ ಚಿಟ್ಟೆ ನಮ್ಮ
ಮನೆಯಂಗಳದ ಅಳತೆ ಮಾಡಿದ್ದು
ಹೀಗೆ ಎಲ್ಲವೂ ಮೆಲುಕುತ್ತಿವೆ
ಪದೇ ಪದೇ ಎದೆ ಕುಲುಕುತ್ತಿವೆ

Sunday 26 February 2017

ಅರವತ್ತರ ಅನ್ಯೋನ್ಯತೆ

ಬಾಗಿಲಲಿ ಬಣ್ಣದ ಚಿತ್ತಾರ ಬಿಡಿಸುವ
ನನ್ನವಳಿಗೀಗ ಅರವತ್ತು ವರುಷ
ದಿನಾ ಪಾತ್ರೆ ತೊಳೆದು ಸವೆದ ಕೈಯಲ್ಲೂ
ಕಾಣುತ್ತಿದೆ ಹದಿನಾರರ ಹರುಷ

ಕಾವಲುಗಾರರಿಲ್ಲದ ಬಾಯೊಳಗೆ
ಮೂಡುವ ಮಂದಹಾಸಕೆ
ಮತ್ತು ಬರಿಸುವ ಶಕ್ತಿ ಇನ್ನೂ ಬತ್ತಿಲ್ಲ
ಸುಕ್ಕುಗಟ್ಟಿದ ಮೈಯಲ್ಲೂ
ನಳನಳಿಸುವ ಹೊಳಪು
ಕತ್ತು ಅಲುಗಾಡದೆ ನೋಡುವಂತಿದೆಯಲ್ಲ

ನಾನಂತು ಸುಖಿ, ಇಂತ ಸಖಿ ಸಿಕ್ಕಿರುವಾಗ
ಮಾಸದಿರುವ ಒಯ್ಯಾರಕೆ ಸೋತು
ಪಕ್ಕದವರ ಗೋಜಿಗೆ ಹೋದವನಲ್ಲ
ಹತ್ತಾರು ಹೆತ್ತರೂ ಅಬ್ಬಾ ಅದೆಂತ ಹೊಂದಾಣಿಕೆ
ಹಗಲಿರುಳೆನ್ನದೆ ಕಾಡಿದರೂ
ಬೇಡವೆಂದು ದೂರ ತಳ್ಳಿದ ದಿನವಿಲ್ಲ

ಇದಲ್ಲವೆ ಬಂಧ, ಎಲ್ಲದರಲ್ಲೂ ಬೆರೆತ ಸಂಬಂಧ
ನನಗಾಗಿ ಅವಳು ಅವಳೊಬ್ಬಳೇ ಅವಳು
ಮುನಿಸಿಲ್ಲದ ಮನಸಿಂದ ಕಲಿತೆ ಹಲವು ಅವಳಿಂದ
ಅವಳಿಗಾಗಿ ನಾನು ನನಗೊಬ್ಬಳೇ ಅವಳು...

Sunday 19 February 2017

ಪ್ರತಿ ಸನ್ನೆಗೂ ಅರ್ಥವಿದೆ
ಪ್ರತಿ ಸೊನ್ನೆಗೂ ಸ್ವಾರ್ಥವಿದೆ


ನಮಗೆಲ್ಲ ತಿಳಿದಿರುವಂತೆ ಪ್ರಪಂಚದಲ್ಲಿ ಮಾತಾಡುವ ಏಕೈಕ ಜೀವಿ ಮನುಷ್ಯ. ಮಿಕ್ಕಿದೆಲ್ಲಾ ಪ್ರಾಣಿ ಪಕ್ಷಿಗಳು ತಮ್ಮ ಮೂಕ ಸನ್ನೆಗಳಿಂದ ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತವೆ. ಅವುಗಳಿಗೆ ಮಾತ್ರ ಅವುಗಳ ಮೂಕ ಭಾಷೆ ಅರ್ಥವಾಗುವುದು. ವೈಜ್ಞಾನಿಕತೆ ಮುಂದುವರಿದಂತೆ ಪ್ರಾಣಿ ಭಾಷೆಗಳನ್ನು ಅರ್ಥ ಮಾಡಿಕೊಳ್ಳಲು ಮನುಷ್ಯ ಬೇಕಾದಷ್ಟು ಸಂಶೋಧನೆ ಮಾಡಿದ್ದಾನೆ. ಈಗಲೂ ಪ್ರಯತ್ನಗಳು ನಡೆಯುತ್ತಿರುತ್ತವೆ. ಆದರೆ ಇಲ್ಲಿವರೆಗೂ ಸರಿಯಾಗಿ ಅದರ ಫಲಿತಾಂಶ ಸಿಗಲಿಲ್ಲ. ಹಾಗಾಗಿ ಪ್ರಾಣಿಭಾಷೆ ಮೂಕಭಾಷೆಯಾಗಿ ಪ್ರಚಲಿತದಲ್ಲಿದೆ. 

ಅವುಗಳದ್ದೇ ಆದ ಮೂಕಸನ್ನೆಗಳಿಂದ ಮಾತಾಡಿಕೊಂಡು ತಮ್ಮ ತಮ್ಮ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ನಾನು ಸಾಕಿರುವ ಬೆಕ್ಕು,ನಾಯಿ, ದನ, ಕೋಳಿಗಳಲ್ಲಿ ನೋಡಿರುತ್ತೇವೆ. ಪ್ರಾಣಿಗಳ ಮಾತು ಇರಲಿ, ಮನುಷ್ಯ ಕೂಡ ಒಮ್ಮೊಮ್ಮೆ ಮೂಕ ಪ್ರಾಣಿಯಂತೆ ವರ್ತಿಸುವುದನ್ನು ನಾವು ನೋಡಿರುತ್ತೇವೆ. ಅತ್ಯಂತ ಭಾವುಕನಾದಾಗ, ಅತ್ಯಂತ ವೇದನೆಗಳಿಂದ ಕೂಡಿದಾಗ ಮಾತುಗಳೇ ಹೊರಡದಾಗ, ಮೂಕಭಾಷೆಯಲ್ಲಿ ತಮ್ಮ ನೋವನ್ನು ತೋರಿಕೊಳ್ಳುವುದು ಇದೆ. ಅಂದರೆ ಮನುಷ್ಯ ತನ್ನ ಉತ್ಕಟ ಪ್ರೀತಿ ಮತ್ತು ವೇದನೆಗಳನ್ನು ತೋರ್ಪಡಿಸುವುದು ಸನ್ನೆಯಿಂದಲೇ. ಅದರಂತೆ ಪ್ರತಿ ಸನ್ನೆಗೂ ಅದರದೇ ಆದ ಅರ್ಥವಿದೆ.

"ಕಣ್ಣ ಸನ್ನೆ" ಇದರ ಅರ್ಥ ಗೊತ್ತಿಲ್ಲದವರಾರು ಇರ್ಲಿಕ್ಕಿಲ್ಲ. ಪ್ರೀತಿ-ಪ್ರೇಮ ಶಬ್ದದ ಅರ್ಥ ಗೊತ್ತಿದ್ದವರು ಇದರ ಅರ್ಥ ನಿರರ್ಗಳವಾಗಿ ಪುಟಗಟ್ಟಲೆ ವಿವರಿಸಬಲ್ಲರು, ಯಾಕೆಂದರೆ ಇವೆರಡು ಒಂದೇ ಜಾತಿಗೆ ಸೇರಿದ ಪದಗಳು. ಕಣ್ಣ ಸನ್ನೆಗೆ ಇಡೀ ಜೀವ ಕುಲಕೋಟಿಯೇ ಸೋತಿದೆ. ಅದು ರಾಜಮಹಾರಾಜರು ಇರಬಹದು, ಋಷಿಮುನಿಗಳು ಇರಬಹುದು, ದೇವಾನುದೇವತೆಗಳು ಇರಬಹುದು. ಇದೊಂದು ಕುಲಕೋಟಿ ಜೀವಿಯ ಕಾಮದಾಟಿಯ ಸೃಷ್ಠಿಕೊಡುಗೆ. ಇದೆ ಪಂಗಡಕ್ಕೆ ಸೇರಿದ ತುಟಿ ಸನ್ನೆ, ಮೂಗು ಸನ್ನೆ, ಕೆನ್ನೆ-ಹುಬ್ಬು ಸನ್ನೆಗಳೂ ಇದೆ ಅರ್ಥ ಕೊಡುತ್ತವಾದರೂ, ಸಂದರ್ಭಕ್ಕೆ ಸಂಬಂಧ ಪಟ್ಟಂತೆ ವ್ಯತ್ಯಾಸವಾಗುತ್ತವೆ. 

ಅದರಂತೆ ಕೈಸನ್ನೆ, ಯಾರನ್ನಾದರೂ ಕರೆಯುದಿದ್ದರೆ, ಯಾರಿಗಾದರೂ ಹೋಗು ಎಂದು ಹೇಳುವುದಿದ್ದರೆ,ಯಾರಿಗಾದರೂ ಕೋಪದಿಂದ ಬೈಯುವುದಿದ್ದರೆ ಕೈಸನ್ನೆ ಮಾಡೇ ಮಾಡುತ್ತೇವೆ. ಕೈಸನ್ನೆ ಸಂಧರ್ಭಕ್ಕನುಗುಣವಾಗಿ ಉಪಯೋಗಿಸಲ್ಪಡುತ್ತದೆ. ಇದೊಂದು ಪರಿಣಾಮಕಾರಿಯಾದ ಸನ್ನೆ ವಿಧಾನ. ನಿತ್ಯ ಬದುಕಿನಲ್ಲಿ ಹೆಚ್ಚಿನ ಸಂದರ್ಭದಲ್ಲಿ ಉಪಯೋಗಿಸುವ ಬಹುಪಯುಕ್ತ ಸನ್ನೆ. ಮಿಕ್ಕುಳಿದ ಸನ್ನೆ ಅಂದರೆ, ಕಾಲು ಸನ್ನೆ(ಲವ್ ಆದಾಗ ನೆಲದಲ್ಲಿ ಕಾಲು ಕೆರೆಯುವುದು)ಹೊರಡು ಅಂತ ಕೋಪದಲ್ಲಿ ಹೇಳುವಾಗ ಕಾಲು ನೆಲಕ್ಕೆ ಕುಟ್ಟಿ ಗದರಿಸುವುದು, ಹೀಗೆ ಹಲವಾರು ಸನ್ನೆಯನ್ನು ಉಪಯೋಗಿಸುತ್ತೇವೆ. ಹೀಗೆ ನಾನು ಹೇಳಹೊರಟಿರುವ ಸನ್ನೆಗಳು ಅದರದೇ ಆದ ಅರ್ಥವನ್ನು ಹೊಂದಿವೆ. ಪ್ರತಿ ಸನ್ನೆಗೂ ಅರ್ಥವಿದೆ 

ಎರಡೆಯದು ಪ್ರತಿ ಸೊನ್ನೆಗೂ ಸ್ವಾರ್ಥವಿದೆ. ಹೌದು ಪ್ರತಿಯೊಂದು ಸೊನ್ನೆ ಅಂದರೆ zero ಗೂ ತಾನು ತನ್ನ ಬೆಲೆಯನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಸ್ವಾರ್ಥವಿದೆ. ಇದರಾರ್ಥ, ತಾನು ಎಲ್ಲಾ ವಿಷಯದಲ್ಲೂ ಸೊನ್ನೆಯಾದರೂ ಎಲ್ಲರಿಗಿಂತ ಮುಂದೆ ಇರಬೇಕು ಅನ್ನುವ ಕೇವಲ ಬುದ್ದಿ ಹೆಚ್ಚು ಇರುತ್ತದೆ. ಏನೂ ಸಾಧನೆ ಮಾಡದವನು ಸಾಧನೆ ಮಾಡಿದವನ ಮುಂದೆ ಕೊಚ್ಚಿಕೊಳ್ಳುವುದು, ಏನೂ ಓದಿಲ್ಲದವನೂ ಓದಿದವನ ಮುಂದೆ ತನಗೂ ಅಲ್ಪ ಸ್ವಲ್ಪ ಗೊತ್ತಿಗೆ ಅಂತ ಸಾಬೀತು ಪಡಿಸಲು ಒದ್ದಾಡುವುದು ಇವೆಲ್ಲವೂ ಸೊನ್ನೆಯ ಸ್ವಾರ್ಥಗಳು. ಇದಕ್ಕಿಂತ ಮುಖ್ಯವಾಗಿ ಸೊನ್ನೆಯ ಬೆಲೆ ಹೆಚ್ಚಿಸಿಕೊಳ್ಳುವುದು. ಅಂದರೆ ಸಂಖ್ಯೆಯ ಮುಂದೆ ಕೂತು ಸಾವಿರ, ಲಕ್ಷ, ಕೋಟಿಯಾಗಿ ಬೆಲೆ ಹೆಚ್ಚಿಸಿಕೊಳ್ಳುವುದು. ನೇರವಾಗಿ ಹೇಳಬೇಕಾದರೆ, ನಮ್ಮ ಕಣ್ಣೆದುರೇ ಇರುವಂತಹ ರಾಜಕೀಯ ನಾಯಕರ ಬದುಕಿನ ಶೈಲಿ. ಸಾಮಾನ್ಯ ವ್ಯಕ್ತಿಯಾಗಿದ್ದವನೊಬ್ಬ ಯಾವುದೊ ಮೋಸದ ಲಾಭದಾಯಕ ಕೆಲಸಕ್ಕೆ ಕೈ ಹಾಕಿ ನಾಲ್ಕು ಕಾಸು ಮಾಡಿ, ಗಲ್ಲಿ ರೌಡಿಗಳನ್ನು ಸೇರಿಸಿಕೊಂಡು ನಂತರ ಚುನಾವಣೆಯಲ್ಲಿ ನಿಂತು ದುಡ್ಡಿನ ಬಲದಿಂದ ಗೆದ್ದು ಸೊನ್ನೆಯಾಗಿದ್ದವನು ಒಂದು ರಾತ್ರಿ ಹಗಲು ಆಗುವಷ್ಟರಲ್ಲಿ ಕೋಟ್ಯಧಿಪತಿಯಾಗುವುದು "ಸೊನ್ನೆಯ ಸ್ವಾರ್ಥವಲ್ಲವೇ" 

ಮೇಲೆ ಕೊಟ್ಟಿರುವ ಎರಡು ವಾಕ್ಯಗಳಿಗೆ ಮನಮುಟ್ಟುವಂತ ವ್ಯಾಖ್ಯಾನ ನೀಡಿದ್ದೇನೆ ಅನ್ನುವ ನಂಬಿಕೆ ನನಗೆ. ಇದರಲ್ಲಿ ನನ್ನ ನಿಲುವು ತಪ್ಪಿದ್ದು, ನಿಮ್ಮ ನಿಲುವೇನಾದರೂ ಬೇರೆ ಇದ್ದರೆ ದಯವಿಟ್ಟು ಮುಕ್ತ ಮನಸಿನಿಂದ ಇಲ್ಲಿ ಹಂಚಿಕೊಳ್ಳಬೇಕಾಗಿ ನನ್ನ ವಿನಮ್ರ ವಿನಂತಿ. ಧನ್ಯವಾದಗಳು 

Saturday 18 February 2017

ಬೆಂಗಳೂರಿನಲ್ಲಿ 20 ವರ್ಷ


ಇಂದು, ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತು, ಕೆರೆ ನೀರು ಕುಡಿದು ಬದುಕುತ್ತಿದ್ದ ಒಬ್ಬ ಸಾಮಾನ್ಯ ಹಳ್ಳಿ ಹುಡುಗನಿಗೆ ಕಾವೇರಿ ನೀರು ಕುಡಿಯುವ ಭಾಗ್ಯ ದೊರೆತ ಸುದಿನ. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಗಿರಿ ನದಿ ತೊರೆಗಳ ನಡುವೆ ಓಡಾಡಿ ತನ್ನ PUC ವಿದ್ಯಾಭ್ಯಾಸ ಮುಗಿಸಿ ಹೊಟ್ಟೆ ಪಾಡಿಗಾಗಿ ಇನ್ನೇನು ದೇಶದ ಬಹು ಆಕರ್ಷಿತ ವಾಣಿಜ್ಯ ನಗರಿಗೆ ಹಾರಬೇಕು ಅನ್ನುವಂತ ಯೋಚನೆ ಮಾಡುತ್ತಿದ್ದ ಚಿಗುರು ಮೀಸೆಯ ಹುಡುಗನಿಗೆ ಕನ್ನಡಾಂಬೆ ಕೈ ಬೀಸಿ ರಾಜಧಾನಿಗೆ ಕರೆಸಿಕೊಂಡ ಸಂದರ್ಭ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆ ಇದ್ದರೂ ಮಾಡಲು ಅನುಕೂಲತೆ ಇರದ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿ ತನ್ನ ಮತ್ತು ತನ್ನನ್ನೇ ನಂಬಿದ ಮನೆಯವರ ನಿತ್ಯದ ಖರ್ಚಿಗೆ ಸಂಪಾದನೆಗೆ ತೊಡಗಿಸಿಕೊಳ್ಳಬೇಕು ಎನ್ನುವ ಯೋಚನೆ ಮಾಡುವಾಗ ದೊರೆತ ಅನಿರೀಕ್ಷಿತ ಅವಕಾಶವೇ ಬೆಂಗಳೂರಿಗೆ ಎಂಟ್ರಿ ಸಿಕ್ಕಿದ್ದು. ಈ ಅದೃಷ್ಟದ ವ್ಯಕ್ತಿ ಮತ್ತಾರು ಅಲ್ಲ, ನಾನೆ.

ಬೆಂಗಳೂರಿಗೆ ಬಂದು, ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಬದುಕಿನ ಎಲ್ಲಾ ಏರಿಳಿತಗಳನ್ನು ಎದುರಿಸಿ ಅನುಭವಿಸುತ್ತ ಇಂದಿಗೆ 20 ವರ್ಷ ಪೂರೈಸಿದ್ದೇನೆ. ಹಳ್ಳಿಯಿಂದ ಬಂದು ಎರಡು ದಶಕಗಳನ್ನು ರಾಜಧಾನಿಯಲ್ಲಿ ಕಳೆದಿದ್ದೇ ಇಂದಿನ ಖುಶಿಯ ಸಮಾಚಾರ. ಈ ನಡುವೆ ನಾಲ್ಕಾರು ಸಲ ಕಂಪನಿ ಬದಲಾಯಿಸಿ, ಸಂಸಾರಿಯಾಗಿ ಬದುಕಿನ ಹತ್ತಾರು ಮಜಲನ್ನು ಹತ್ತಿಳಿದು ಎಲ್ಲಾ ಅನುಭವ ಕಂಡಿದ್ದನ್ನು ಎಂದಿಗೂ ಮರೆಯಲಾಗದು. ಉದ್ಯೋಗದ ಜೊತೆಯಲ್ಲಿ ಹವ್ಯಾಸದ ಕಲೆ, ಸಾಹಿತ್ಯ, ಸಂಗೀತ ಮುಂತಾದವುಗಳಲ್ಲಿ ತೊಡಗಿಸಿಕೊಂಡು ನಿಮ್ಮಂತಹ ಅದೆಷ್ಟೋ ಮಿತ್ರವರ್ಗವನ್ನು ಸಂಪಾದಿಸಿದ್ದು ಇನ್ನೊಂದು ಮಹಾ ಸಾಧನೆ ಅನ್ನಬಹುದು.

ಈ ವಿಷಯ ಇಂದು ಇಲ್ಲಿ ನಿಮ್ಮ ಮುಂದೆ ಪ್ರಸ್ತಾಪಿಸುವ ಸಂದರ್ಭದಲ್ಲಿ, ನನಗೆ ಬೆಂಗಳೂರಿನ ದಾರಿ ತೋರಿಸಿ, ಯಾರೊಬ್ಬರೂ ಪರಿಚಯವಿಲ್ಲದ ಸಿಟಿಯಲ್ಲಿ ನಿಲ್ಲಲು ನೆಲೆ ಮಾಡಿಕೊಟ್ಟು ದುಡಿಯಲು ಒಂದು ಉದ್ಯೋಗ ನೀಡಿ, ಪಾಲನೆ-ಪೋಷಣೆ ಮಾಡಿದ ಎರಡು ಫ್ಯಾಮಿಲಿಗಳ ಪರಿಚಯ ಮಾಡದಿದ್ದರೆ ನಾನೊಬ್ಬ ಋಣಹೀನನಾಗುತ್ತೇನೆ. ನೆರೆಮನೆಯವರಾಗಿದ್ದು ನಮ್ಮೆಲ್ಲಾ ಸುಖ-ಕಷ್ಟಗಳಲ್ಲಿ ಭಾಗಿಯಾಗಿ ತಮ್ಮ ಮನೆಯವರಂತೆ ನೋಡಿಕೊಂಡು, ಮಾನವೀಯತೆಯ ಮೌಲ್ಯವನ್ನು ನಿಷ್ಟುರವಾಗಿ ಪಾಲಿಸಿಕೊಂಡು ಬರುತ್ತಿದ್ದ, ಎಕರೆಗಟ್ಟಲೆ ಜಮೀನಿನ ಒಡೆಯನಾದರೂ ಒಂದಿಷ್ಟು ಗರ್ವ ಅಹಂಕಾರ ಇಲ್ಲದೆ ಬದುಕುತ್ತಿದ್ದ ಶ್ರೀಮತಿ ಆಶಾ ಮತ್ತು ಶ್ರೀ ಭಾಸ್ಕರ್ ಉಬರಲೆ ನನ್ನ ಪಾಲಿಗೆ ದೊರೆತ ಮೊದಲ ಮಾರ್ಗದರ್ಶಕರು. ಈ ದಂಪತಿಗಳೇ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದವರು. (ಮೊದಲನೆಯ ಭಾವಚಿತ್ರ) ಇವರ ಪ್ರೋತ್ಸಾಹ, ಪ್ರೀತಿ, ಹಾರೈಕೆ, ಆದರ್ಶತೆಗಳು ಇಂದಿಗೂ ನನ್ನನ್ನು ಅವರ ಮಾರ್ಗದಲ್ಲಿ ನಡೆಯುವಂತೆ ಕಟಿಬದ್ಧನನ್ನಾಗಿ ಮಾಡಿದೆ.

ಹಾಗೇನೇ ಹಳ್ಳಿಯಿಂದ ಬಂದ ನನಗೆ ಆವರ ಮನೆಯಲ್ಲಿ ಉಳಿಯಲು ಅವಕಾಶ ಕೊಟ್ಟು, ಅವರ ಆಫೀಸಿನಲ್ಲಿ ಕೆಲಸ ಕೊಟ್ಟು ತನ್ನ ಮಗನಂತೆ ನೋಡಿಕೊಂಡ ನನ್ನ ಮೊದಲ ಬಾಸ್ ಶ್ರೀ ಎ. ಶಿವರಾವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಎಸ್. ರಾವ್ ಅವರು ನನ್ನ ಪಾಲಿನ ಗುರುಗಳು, ಪಾಲಕರು, ಪೋಷಕರು. (ಎರಡನೆಯ ಭಾವಚಿತ್ರ). ಸಂಬಂಧಿಗಳೇ ಒದಗಿಬರದ ಸಮಯದಲ್ಲಿ ನನ್ನನ್ನು ಮನೆಯವನಂತೆ ನೋಡಿಕೊಂಡು ನನ್ನ ಏಳಿಗೆಗೆ ಸದಾ ಪ್ರೋತ್ಸಾಹ ನೀಡುತ್ತ ನನ್ನ ಇಂದಿನ ಭವಿಷ್ಯವನ್ನು ಅಂದು ರೂಪಿಸಿದ ಈ ಮಹಾನುಭಾವರ ಋಣ ಎಂದೂ ತೀರಿಸಲಾಗದ ಲೆಕ್ಕ. ಇವರ ಪ್ರತಿಯೊಂದು ಬುದ್ಧಿ ಮಾತುಗಳು, ಪ್ರೋತ್ಸಾಹ, ಮಾರ್ಗದರ್ಶನ ನನ್ನನ್ನು ನಾನೇಗಬೇಕೆಂದು ಯೋಜಿಸಿದ್ದೆನೊ ಆ ಗುರಿಯನ್ನು ಮುಟ್ಟುವಂತೆ ಪ್ರೇರೆಪಿಸಿತ್ತು, ಅದರಂತೆ ಅವರ ಸಹಕಾರವೂ ಸಿಕ್ಕಿತ್ತು, ಆಶೀರ್ವಾದವೂ ದೊರಕಿತ್ತು. 5 ವರ್ಷ ಅವರ ಗರಡಿಯಲ್ಲಿ ಪಳಗಿದ ನನಗೆ ಜೀವನದ ಎಲ್ಲಾ ಕಷ್ಟಗಳನ್ನು ಎದುರಿಸುವ ನೈತಿಕ ಸಾಮಾರ್ಥ್ಯ ತಿಳಿಸಿಕೊಟ್ಟ ಮಹಾನುಭಾವರು.

ಇಷ್ಟೆಲ್ಲಾ ವಿಷಯಗಳನ್ನು ನಿಮ್ಮಮುಂದೆ ಹಂಚಿಕೊಳ್ಳಲು ಬಲವಾದ ಕಾರಣ ಏನಂದ್ರೆ, ನಾವು ಮಾನವರು ಮಾಡಿದ ಉಪಕಾರವನ್ನು ಮರೆತುಬಿಡುತ್ತೇವೆ. ಮುಂದೆ ಬೆಳೆದು ನಿಂತಾಗ ಬೆಳೆಸಿದವರನ್ನೆ ತೆಗಳುತ್ತೇವೆ. ಹಾಗಾಗಬಾರದು, ನಮಗೆ ಪ್ರೀತಿ ತೋರಿಸಿದವರನ್ನು ನಾವು ಎಂದೂ ಮರೆಯಬಾರದು. ಅವರ ಮನಸಿಗೆ ನೋವು ನೀಡದೆ ಸದಾ ಅವರ ಉಪಕಾರವನ್ನು ಸ್ಮರಿಸುತ್ತಾ ಸಾಧಿಸಿ ಬದುಕಿ ತೋರಿಸಬೇಕು. ಅವರನ್ನು ಗೌರವಿಸಿ ಅವರು ಹೆಮ್ಮೆಯಿಂದ ಹೇಳುಕೊಳ್ಳುವಂತಹ ಸಂಬಂಧ ಇಟ್ಟುಕೊಳ್ಳಬೇಕೆಂಬುದಷ್ಟೇ ನನ್ನ ಆಶಯ.

ನರೇಂದ್ರ ಕಬ್ಬಿನಾಲೆ