Sunday 11 November 2012

ದೀಪಾವಳಿ

ಸರಣಿ ದೀಪಗಳೊಳಗೆ ಪ್ರಜ್ವಲಿಸೋ
ಕಿರಣಗಳು ಅಳಿಸುತ್ತಿವೆ ಅಂಧಕಾರವ;
ನಗೆ ಬೀರಿ ತೇಲಾಡುವ ಜ್ಯೋತಿಗಳು

ಸಾರುತ್ತಿವೆ ಪಡೆನೀನೆಂದೂ ಹರುಷವ !
ಮೊದಲೊಂದು ದಿನ ಮಡಿ, ತೈಲ ಮಜ್ಜನ
ಹೊಸಯುಡುಗೆಯುಟ್ಟು ಮಿರಮಿರಿಸೋ ದಿನ
ನರಕಾಸುರನಂತಾಗದಿರೆಂದು ಕೃಷ್ಣ ಜಗಕೆ
ಸಾರಿದುದನ್ನ ಮರೆಯದೆ ಮೆರೆವ ಸುದಿನ
ನಡುವಿನದು ಹಬ್ಬ, ಕೆಟ್ಟ ಅಮಾವಾಸ್ಯೆಯಲ್ಲ
ಬಲಿಯ ಬಲಿ ಕೇಳಲಿಲ್ಲ, ಬದಲಾಗಿ ಕಲಿ
ನೀಗಿದ ಹರಿ ಜಗಕೆ ಅರುಹಿದ ಒಲವಿನಲಿ
ತನ್ನರಸಿ ಲಕುಮಿಯ ಪೂಜಿಸಿರೆಂದು ಸಾರಿ
ಮಾರನೆಯ ಮುಂಜಾನೆ ಗೋವು ಆರಾಧನೆ
ಶೃಂಗರಿಸಿ ಪೊಡಮಟ್ಟು, ಮೆರವಣಿಗೆ ಮಾಡಿ;
ಬಲೀಂದ್ರನ ಕರೆದು, ಸ್ಮರಿಸಿ ಭಕ್ತಿಯೊಳು
ಹೊಸತನದಿ ಮೆರೆವ ಸಂಭ್ರಮದ ದಿವಸ !
ಮೂರುದಿನಗಳ ಮಜ್ಜನ ನೀಗುವುದು
ಕಳೆದ ಮುನ್ನೂರು ದಿನಗಳ ಕೊಳೆತನ;
ಹರುಷ ಉಕ್ಕಿ ಬರಲೊಂದು ಸಾಕು
ಮನೆಯವರ ಉತ್ಸಾಹ, ಉಲ್ಲಾಸ, ಸ್ಪಂದನ !
ಹಬ್ಬವಿದು ನೂತನ, ಹೊಸತನದ ಸಂಕಲನ
ಕಲೆತು-ಬೆರೆತು ಬಾಳೆಂದು ಸದಾ ಸಾರುತ್ತಿರುವ
ತಮವನಳಿಸಿ ಸುಜ್ಞಾನ ದೀವಿಗೆ ಬೆಳೆಸುವ
ದೀಪಗಳು ಸಾಲು ಸಾಲಿನಲ್ಲಿ ನಗುವ ದೀಪಾವಳಿ !!

Sunday 30 September 2012

ಚೆಲುವು


ಬೇಲಿಯಾಚೆಯಲಿ ಮುಳ್ಳಿನ ಗಿಡ
ಗಿಡದ ತುದಿಯಲೊಂದು ಚೆಲುವ ಗುಲಾಬಿ
ಆ ಹೂವಿಗೂ ಮತ್ತೊಂದು ಕಾವಲು : ಮಾಲಿ 
ಮನೆಯವರ ಅಣತಿಯಂತೆ ಕಾಯುವವ;
ವೀಕ್ಷಕರ ಕಣ್ಣು ಹೂವ ಮೇಲೆ
ನೋಡುವಾಸೆ, ಮುದ್ದಿಡುವಾಸೆ, 
ಹೂವಿಗದೋ ಹಲವಾರು ಯೋಚನೆ
ಗುಡಿಯಾ ? ಮುಡಿಯಾ ? ದ್ವಂದ್ವ.. 
ಅಥವಾ ಪ್ರೇಮಿಯ ಕೈಯೋ ?
ಚೆಲುವಿಗೂ ಮನವಿದೆ..ಗುಣವಿದೆ
ಅನ್ಯರಲಿ ಬೆರೆವ ತುಡಿತವಿದೆ..
ಅರಿಯಬೇಕಷ್ಟೇ ! ಅರಿತು
ಭಾವನೆಗಳ ಮನ್ನಿಸಬೇಕಷ್ಟೇ;
ಹಿಂಸಿಸಿ ನೋವಿಸಬಾರದಷ್ಟೇ..!
ದುಂಬಿ ಸುತ್ತುವುದು, 
ಕಾವಲು ಕೋಟೆ ಬೇಧಿಸುವುದು;
ಹೂವಿನ ಚೆಲುವಿರುವವರೆಗೆ
ಹೂವು ತಾ ನಗುವುದು 
ಅನ್ಯರಿಗೂ ಖುಷಿ ಕೊಡುವುದು 
ಅದರಲ್ಲಿ ಯವ್ವನ ಇರುವವರೆಗೆ !!

Saturday 25 August 2012

ಬರಗಾಲದ ಬೇಗೆಯಲಿ

ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!
ಒಲವ ನೀರನೆರಚಿ
ಅವಳ ಮನ ತಣ್ಣಗಿಡಲೆಂದು 
ಮೋಡವಾಗಿ ಬಾನನೇರಿದರೂ
ಮತ್ತೆ ಗುಡುಗುಗಳ ಅಬ್ಬರಕ್ಕೆ
ಬಲವಾದ ಗಾಳಿ ಬಂದು
ಮೋಡಗಳ ದಿಕ್ಕು ಬದಲಿಗೊಂಡು
ಸುರಿಯ ಬೇಕಿದ್ದ ಸೋನೆ 

ಸುರಿದು ತಂಪು ಮಾಡಲಿಲ್ಲ..!!
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಸುಡುನೆಲವ ಉತ್ತಿ 
ಪಡೆವೆ ಪ್ರೀತಿಯ ಫಸಲು
ಬಿಡದೆ ನಡೆವೆ ಅವಳೆಡೆಗೆಂದು 
ನಡುನಡುಗಿ ನಡೆದರೂ
ಬಿಡಲಿಲ್ಲ ಅವಳ ಗಮನ ನನ್ನ ಕಡೆ
ಕಡುಕೋಪ ಬಿಡುವೆಂದು 
ಕೊಡು ನೀ ನಿನ್ನೊಲುಮೆ 
ಪಡೆದಿಡುವೆ ಕಡೆತನಕ 
ಕಡು ಪ್ರೀತಿಯಿಂದ ಕೇಳಿದರೂ 
ಪಡೆಯಲಾಗಲಿಲ್ಲ ಕಡೆಗೂ ಅವಳ ಕೂರ್ಮೆ.
ಬರಗಾಲವೀಗ.. 
ಎನ್ನರಗಿಣಿಯ ಎದೆಗೂಡು 
ಬರಿದಾದ ಬಯಲು..!!
ಮರುಭೂಮಿಯಲ್ಲ ಅವಳ ಒಡಲು
ಕಾದಿರಬಹುದು ಕೆಲವು ದಿನಗಳವರೆಗೆ
ಕಾಯುವೆನು ಖಂಡಿತ ಆರುವ ತನಕ
ಬೆಂಬಿಡದೆ ಸಾಗುವೆ ಬಿಸಿಲು ಮರೆಯಾಗಿ 
ಸೋನೆ ಹನಿ ಎನ್ನ ಕೆನ್ನೆ ಸವರಿ
ಖುಷಿ ಕೊಡುವ ಕಾತರದಲ್ಲಿ; 
ಬರಗಾಲ ನೀಗಿ ಬೆಳೆ ಬೆಳೆದು
ಬೆರೆತು ಫಸಲು ಕೊಡುವ ತವಕ
ಬರಿದಾದ ಬಯಲು ಹಸುರಾಗುವ ತನಕ !!

Tuesday 14 August 2012

(ಅ)ಸ್ವತಂತ್ರ ಭಾರತ




ದೊರಕಿತೆಮಗೆ ಸ್ವಾತಂತ್ರ್ಯ ಹರುಷಕೆ ಪರಿವಿಲ್ಲ
ಹಲವಾರು ವರುಷಗಳ ಹೋರಾಟಕೆ ಗೆಲುವು;
ಸಾವಿರಾರು ಜೀವಗಳ ಬಲಿದಾನಕೆ ಫಲವು !
ಪರರಿಂದ ಹೊರಬಂದು ಹರುಷದಿಂ ಬೀಗಿದೆವು
ದೊರಕಿದೊಡೆ ನಮಗಂದು ದಾಸ್ಯದಿಂ ಮುಕ್ತಿ;
ಅಹಿಂಸೆ, ಸತ್ಯ, ತ್ಯಾಗದೊಳಗೆ ಸೇರಿಸಿ ಯುಕ್ತಿ !
ಕಳೆದು ಹೋದವು ಅರವತ್ತೆಂಟು ಸಂವತ್ಸರ
ಮರುಕಳಿಸುತ್ತಿದೆ ಮತ್ತಿಲ್ಲಿ ಜನರೊಳಗೆ ಮತ್ಸರ;
ನಾನು ನನ್ನದೆನ್ನುವ ಸ್ವಾರ್ಥ ಬೆಳೆದು ಹೆಮ್ಮರ !
ಅಂದು ದಾಸ್ಯತನದ ಬದುಕು, ಇಲ್ಲದೆ ಸ್ವಚಂದತೆ 
ಇಂದೂ ದಾಸರು ನಾವು, ಉಳ್ಳವರ ಗುಲಾಮರು;
ದೋಚಿಕೊಂಡರು ದೇಶ ಸ್ವಾರ್ಥಕೆ ಖದೀಮರು !
ಭಯದ ಗೂಡೊಳಗೆ ನಾವು ನಡೆತಂದು ಜೀವನವ 
ಕಳೆದುಕೊಂಡಂತೆ ದೊರೆತ ಸ್ವಾತಂತ್ರ್ಯದ ಹೊಸಬಾಳು;
ಮರಕಲಿಸಿದಂತೆ ಪೂರ್ವದ ಅಡಿಯಾಳ ಕರಿಬಾಳು!
ಕೆಚ್ಚೆದೆಯ ಕಲಿಗಳೇ ಎಚ್ಚೆತ್ತು ಭ್ರಷ್ಟಚಾರಕೆ ಕಿಚ್ಚಚ್ಚಿ 
ಮುಂದೆ ನಡೆಯುವುದರ ಅರಿತು ಯುಕ್ತ ಹೆಜ್ಜೆಹಾಕಿ ;
ಮತ್ತೊಮ್ಮೆ ಕಳೆದುಕೊಳ್ಳುವ ಮುನ್ನ; ದೇಶದ ಉಳಿವಿಗಾಗಿ !!

Wednesday 1 August 2012

ರಕ್ಷಾ ಬಂಧನ




ಬಂಧನ.. ಜೀವ ಬಂಧನ, ಭಾವ ಬಂಧನ..
ಪ್ರೀತಿ ಪ್ರೇಮದಿ ಬೆರೆವ ಅನುರಾಗ ಬಂಧನ,
ನೋವು ನಲಿವೆಗೆ ಸ್ಪಂದಿಸೋ ಸ್ನೇಹ ಬಂಧನ 
ಅದೆಷ್ಟೋ ಭಾವಗಳ ಮೀರಿ ಮೆರೆದು ನಿಂದವು
ಅಣ್ಣ-ತಂಗಿಯರ ಅಕ್ಕರೆಯ ಸೋದರ ಬಂಧನ.!
ಬೆಸೆದ ಮನ ಒಮ್ಮೊಮ್ಮೆ ಬಸವಳಿಯಬಹುದು..
ಹೆಸೆದ ಬದುಕೂ ಕೆಲವೊಮ್ಮೆ ಮುಸುಕಾಗಬಹುದು,
ಕುಸಲತೆ ಕೇಳುವ ಗೆಣೆಯ ಪಕ್ಕ ಸರಿಯಬಹುದು..
ವಿಷವಿರದ ನೆತ್ತರ ಸಂಬಂಧವದು ಬೆಸೆದಿರಲು 
ಮಿಸುಕದೆ ಹೆಣೆದಿರಲು, ವಿಂಗಡಿಸಲಾಗದು !!
ಬಾಹು ಬಂಧನ.. ಅವರವರ ಭಾವ ಸಂವೇದನ 
ಸ್ನೇಹವೋ, ಪ್ರೀತಿಯೋ.. ವಿಚಾರವಲ್ಲಿ ಗೌನ..!
ರಕ್ಷಾ ಬಂಧನ.. ಸ್ವಚ್ಛ ಮನ ಪರಿಶೋಧನ ..
ಸೋದರತೆಯ ಅಮೂಲ್ಯ ಭಾವ ಅನಾವರಣ
ರಕ್ಷಣೆಯ ರಕ್ಷಾ ಕಂಕಣ ಭಾತೃ ಧಾರಣ.!

Saturday 23 June 2012

ಹೆತ್ತಬ್ಬೆ

ಸಂಸೃತಿಯೊಳು ಸಿಲುಕಿ ಸಂಸಾರದ
ಸೆಲೆಯೊಳಗಾಡುವ ಪರಿವಿತ್ತಾದೇವನ
ಚಿತ್ತದಂತೆ ಬಸಿರಾದ ಎನ್ನಬ್ಬೆಯ
ಗರ್ಭದೊಳು ಉಸಿರಿತ್ತನೆನಗೆ..
 
ಸುಪ್ತ ಕಾಯ ಸುಸೂತ್ರದಿಂದಿರಲು
ಕ್ಲಪ್ತ ಕಾಲದಾದ್ಯಂತರೊಳಗೂಡಿ
ಕಾಯ್ವಳಾ ಮಮತೆಯ ಮೂರ್ತಿ
ಅನ್ಯ ಜೀವವೆಂದಿನಿಸದೆ ಮುದ್ದಿಸಿ..
 
ಅದೆಂತೂ ತೀರಿಸಲಾಗದೆಮಗೆ
ಅವಳನನ್ಯ ಋಣಭಾರವನು,
ಇರುವುದೊಂದೇ ಮಾರ್ಗವದು
ಅವಳಾದರ್ಶವನುವನು ಎಮ್ಮ
ನಡೆನುಡಿಯೊಳವಡಿಸಿ ಹೆತ್ತಬ್ಬೆಯ  
ಕೀರ್ತಿ ಪಸರಿಸಧಿಲೋಕದೊಳು..!

ಚಿಕ್ಕ ಆತ್ಮ; ದೊಡ್ಡ ತತ್ವ



ಇರುವ ಕಣದಗಲದ
ಉದರ ಪೊರೆಯಲೋಸುಗ
ನಡೆದ ದಾರಿ ನೆನಪಿದೆಯೋ
ಅರಿವಿಲ್ಲ; ನಡೆದದ್ದೇ ದಾರಿ
ಸೇರಿ ಸಾಗಿದರು ದೂರ ದಾರಿ
ಇರುವ ಕಡೆಗೆ ಪಯಣ;

ಗೊತ್ತುಗುರಿವಿಲ್ಲದಿದ್ದರೂ ಸುತ್ತಿ 
ಹೊತ್ತೊತ್ತಿಗೆ ಮೇದು ತಿನ್ನುವರು
ಇದ್ದುದನ ಹಂಚಿ; ನಾವಾತತ್ವವ 
ಅರಿಯದೆ ಅನ್ಯತ ಭಾವ ತುಂಬಿ 
ಕಚ್ಚಾಡಿ ಹೊನ್ನು, ಮಣ್ಣು, ಹೆಣ್ಣಿಗಾಗಿ !

ಬೆಂಬಿಡದೆ ಒಡನಾಡಿಗಳ    
ಬೆಂಬಲಿಸಿ ಜೊತೆನಡೆದು 
ಶಿಸ್ತಿನ ಜೀವನ  ಶೈಲಿಯ
ಅರಿತು ಅಳವಡಿಸಬಾರದೇಕೆ
ಅನ್ನುವ ಗೂಡ ಪ್ರಶ್ನೆ !

ಒಗ್ಗಟ್ಟಿನಲ್ಲಿ ಬಲವಿದೆ;
ಜೊತೆಯಲಿ ನಲುವಿದೆ;
ಅರಿಯಲೊಬ್ಬರನೊಬ್ಬರು
ಕೂಡಿ ಬಾಳಲು ಸುಖವಿದೆ;

Thursday 14 June 2012

ಪ್ರತ್ಯಕ್ಷ ದೇವತೆ


ಹರಿವ ನೀರಿದ್ದರೂ
ಬೀಸೋ ಗಾಳಿದ್ದರೂ
ಕುಡಿಯೊಡೆಯಲು ಭೂಮಿಯೇ ಬೇಕು ಬೀಜಕೆ !

ದೇವರ ವರವಿದ್ದರೂ
ಹುಟ್ಟಿಸೋ ಪಿತನಿದ್ದರೂ
ಹಡೆಯಲು ತಾಯಿಯೇ ಬೇಕು ಜೀವಕೋಟಿಗೆ !!

ನವಮಾಸ ಹೊತ್ತು, ನವಜೀವ ಇತ್ತು,
ನಡೆದಾಡಿಸಿ, ನಮಗೆ ನುಡಿಯಾಡಿಸಿ
ಕಡೆತನಕ ಜೋತೆಯಾಗಿರೋ ದೇವತೆ..
ಅವಳೇ ನಮ್ಮ ಮಮತೆಯ ಮಾತೆ ..!!

Saturday 2 June 2012

ಹೊಸ ವರ್ಷ : ಆತುರ-ಕಾತುರ


ಹಾತೊರೆಯುತಿವೆ ಮೈಮನ
ಹೊಸವರುಷದ ಆಗಮನಕೆ
ನವ ಚೈತನ್ಯ ನವ ಉಲ್ಲಾಸ
ನವಭಾವದ ಶುಭಹಾರಯಿಗೆ ;

ಅರಿವಿದ್ದರೂ ಮರೆತ್ಹೋಗಿದೆ
ಕಳೆದಿರುವ ಭವಮಾನದ 
ಆಯುರ್ಮಾನ, ಪರಿಮಾಣ;  
ಬಾಳಬಂಡಿಯ ಗಾಲಿ
ಸವೆದ್ಹೋಗಿರುವುದನ್ನ;
ಕಳೆದಿರುವ ಕ್ಷಣಗಳು
ಮತ್ತೆಬಾರದಿರುವುದನ್ನ;
ಅಳಿಸಲಾಗದ ಸಂಬಂಧ
ಜಗದಿಂದ ಮರೆಯಾಗಿರುವುದನ್ನ;

ಕಳೆದುದನ ಮತ್ತೆ ಮೆಲುಕೇಕೆ;
ಮುಂದೆ ಬರುವುದನ
ಬಯಸುವುದೇ ನವಜೀವನ
ಎಂಬುದಲ್ಲವೇ ಮನುಷ್ಯನ
ಹುಟ್ಟುಸಾವಿನ ಗುಣ
ನಡೆಯುವುದದೆ ಮುಂದೆ
ಯುವ ಭಾವನ; ನವ ಯವ್ವನ
ಜಗತ್ತಿನ ಚೇತನ...!!

Thursday 31 May 2012

ಈ ಹರೆಯದಲಿ ಎಲ್ಲವು ಟ.ಟ.ಟ.!!!


ಮನವೆಂಬ ಮರ್ಕಟ
ಮಾಡುತಿದೆ ಹುಡುಗಾಟ,
ಹದೆಯದ ದಿನದಲ್ಲಿ
ನೀಡುತಿದೆ ತಿಕಲಾಟ ;
ಪಡೆಯುವ ತವಕದಲಿ
ಮಾಡುತಿದೆ ಹುಡುಕಾಟ,
ದೊರೆಯದೆ ಹೋದಾಗ
ಪಡುತಿದೆ ತೊಳಲಾಟ ;
ಕಣ್ಣ ಮುಂದೆ ಬಂದಾಗ
ಕಣ್ಣುಗಳು ಪಟ ಪಟ ;
ಕುಡಿನೋಟ ಬಿರಿದಾಗ
ಈ ಜೀವವೇ ತಟ ಪಟ
ಇದೆಂತ ಅನುಭವ
ಹೇಳಲಾಗದು ದಿಟ,
ಹೇಳದೆ ಕುಳಿತರೆ
ಸೇರಬೇಕು ಮಠ....!!!
ಇನ್ನೂ ಇದೆ ನೋಡಿ ತುಂಬಾ ಟ.. ಗಳ ಕಾಟ..
ಹೇಳುವೆ ಇನ್ನೊಮ್ಮೆ ಈಗ ಹೇಳುವ ಟಾಟಾ..

Wednesday 30 May 2012

ಗೆಳೆತನ

                                  ಮನವರಿತು, ಮನದ ಭಾವನರಿತು,
                                  ಪವಮಾನದಿ ಅವರವರ ನೋವನರಿತು 
                                  ಕಡೆಗಾಲವೆಂದಿರದೆ ನಡೆದಾಡಿ ಕೂಡಿ
                                  ಬಾಡದೇ ಬಳುವ ಭಾವವೇ ಗೆಳೆತನ !

                                 ಭಾನೆತ್ತರಕೇರಿ ದಿಗಂತದೆತ್ತೆಡೆಗೆ ಜಾರಿ 
                                 ಮಿರಮಿರ ಮಿನುಗೋ ಚುಕ್ಕಿಗಳ ಮೀರಿ
                                 ಬೆಳೆಯಿದ್ದು, ಬೆಲೆಕಟ್ಟಲಾಗದೆ ಬೆಲೆಬಾಳುವ 
                                 ಶುಭ್ರಸ್ನೇಹಕ್ಕೆಲ್ಲಿದೆ ಹೇಳಿ ಹಗೆತನ ?

                                 ತುಂಬಿರಲು ನಮ್ಮಲ್ಲಿ ಹೊಂದುವ ಅರಿವು
                                 ಬರದು ಎಂದೆಂದೂ ಅಗಲಿಕೆಯ ನೋವು;
                                 ಹೆಣ್ಣಿರಲಿ ಗಂಡಿರಲಿ ಸ್ನೇಹ ಮೂಡುದು ಸತ್ಯ 
                                 ನಡೆಯಲಿ ತಡೆಯಿರದೆ ಸ್ನೇಹಪರ್ವ ನಿತ್ಯ ನಿತ್ಯ.!!

Tuesday 29 May 2012

ಅಂತರಂಗದ ಅಂತರ











ಮುಸ್ಸಂಜೆಯ ಹೊತ್ತಲ್ಲಿ ಮಬ್ಬಾದ ಬದುಕು
ಮತ್ತದೇ ಹಳೆಯ ನೆನಪುಗಳ ಗೋಪುರ
ಸವಿಯಾದ ಸವಿಯುಣ್ಣದ ನೊಂದ ಮನ ಒಂದೆಡೆ
ಸುಖವಿದ್ದರೂ ನೆಮ್ಮದಿ ಕಾಣದ ಜೀವ ಇನ್ನೊಂದೆಡೆ 

ಮೆಲುಕು ಬೇಡವೆಂದರೂ ಮರಳಿ ಕಾಡುವ ನೆನಪುಗಳು 
ಅಲೆಗಳಂತೆ ಒಂದೊಂದರಂತೆ ಮೇಲೆರಗಿ ಕಾಡುತಿರಲು 
ಕುಳಿತು ದಣಿವಾರಿಸುವಂತೆ ಗತವಿಷಯ ಮೆಲುಕುಹಾಕಿ
ನಡೆಯುತಿರಲು ಅಂತರಂಗದ ಅಂತರದ ತುಲನೆ ..!

ನಡೆದಾಡಿ ಕಲ್ಲುಮುಳ್ಳುಗಳ ಕಡಿದಾದ ದಾರಿಯಲಿ
ಬಳಲಿ ಬೆಂಡಾಗಿ ನರಳುತಿರುವ ಬಡಜೀವ ನನ್ನದು;
ಅರಸೊತ್ತಿಗೆ ಸುಖದಿಂದ ಗತಕಾಲದಲ್ಲಿ ಮೆರೆದು
ಅರಸನಂತಿದ್ದರೂ ನೆಮ್ಮದಿ ಕಾಣದ ಜೀವ ನನ್ನದು..!

ಸುಖವಿಲ್ಲದಿರೂ ನೆಮ್ಮದಿಯಿತ್ತೆನಗೆ ಇದ್ದುದನೇ ತಿಂದು 
ಸುಖನಿದ್ರೆ ಬಿದ್ದು ನಾಳೆಗೆ ನಾಳೆನೇ ಉತ್ತರ ಎನ್ನದಾಗಿತ್ತು !
ತಿಂದುಂಡು ತೇಗಿ, ರಾಜನಂತೆ ಬೀಗಿ ಬದುಕಿದರೂ
ಕೊನೆಗಳಿಗೆ ನಿರ್ಗತಿಗನಾಗಿ ವೃದ್ದಾಶ್ರಮವೆ ಎನಗಾಯಿತು !

ಸೂರ್ಯಸ್ತದಲಿದೆ ನಾಳೆಯ ಹೊಸತನದ ಬಯಕೆ 
ನಮಗೆಲ್ಲಿದೆ ನಾಳೆಯ ಹೊಸತನ ಉಗಮದ ನಂಬಿಕೆ
ಇಬ್ಬರದೂ ಒಂದೆ ಚಿಂತೆ; ಗತಜೀವನದ ವ್ಯಥೆಯ ಕತೆ
ಉಳಿದುದೊಂದೇ ನಮಗೆ- ನಡೆದುದೆಲ್ಲವನೂ ಮರೆತು
ಸೂರ್ಯಸ್ತದಲಿ ಬೆರೆಯುವಾಸೆ..!!

Monday 28 May 2012

ನನ್ನವಳ ಹುಡುಕಾಟ


ಎಲ್ಲಿರುವಳೋ ನನ್ನವಳು
ಹುಡುಕಿ ಸೊರಗಿಹವು ನನ್ನ ಕಣ್ಣಗಳು;
ಗರಿಗೆದರಿ ಹಾರಿ, ಬಾನೆತ್ತರಕೇರಿ
ಮುಚ್ಚಿಕೊಳ್ಳದೆ ಮಿಟುಕುತ್ತಿವೆ ಕಣ್ಣ ರೆಪ್ಪೆಗಳು

ಹಲವಾರು ಮನಕದವ ತಟ್ಟಿದರೂ
ಕೆಲವಾರು ತೆರೆಯಲೇ ಇಲ್ಲ;
ಕೆಲವೊಮ್ಮೆ ತೆರೆದುಕೊಂಡರೂ
ಮನಭಾವನೆಗೆ ಸ್ಪಂದಿಸಲಿಲ್ಲ !

ಬಾಗಿಲಲೇ ನಿಂದಿರಿಸಿ ಕಳುಸಿದವು
ಒಳಗೆ ಬರಮಾಡಿಕೊಳ್ಳಲಿಲ್ಲ ಕೆಲವು;
ಹುಮ್ಮಸ್ಸಿನೋಳು ಒಳನಡೆದರೂ
ಕುಳ್ಳಿರಿಸಿ ಉಪಚರಿಸಲಿಲ್ಲ ಹಲವು !

ಪ್ರೀತಿಯ ಹುಡುಕಾಟ ವ್ಯಾಪಾರವಾಗಿ
ಮನ ಹರಡಿದೆ ವಿಶ್ವ ವ್ಯಾಪಕವಾಗಿ
ಹುಡುಕಿ ಕೊಡಬಲ್ಲಿರೋ ಎನಗೊಂದು
ಮುದ್ದನೆಯ ಮನವಿರುವ ಪ್ರೀತಿಬಂಧು ?!

ನೆರಳ ನೆರವು



ವಿಸ್ತಾರವಾದ ಬಯಲು
ಭಾರವಾದ ಹೆಜ್ಜೆ
ಸಾಗದಷ್ಟು ದೂರ ದಾರಿ
ಸುತ್ತಲಿನ ಚಿತ್ರಣ ಸ್ಪಷ್ಟ ಎನಿಸಿದರೂ ಅಸ್ಪಷ್ಟ..!
ನುಲಿದು ಸಾಗುವ ಜೀವಕೆ
ಕಲಿಸೋ ಛಾಯೆಯ ಮಾರ್ಗದರ್ಶನ ;
ಒಮ್ಮೊಮ್ಮೆ ಸಣ್ಣ, ಮತ್ತೊಮ್ಮೆ ಬೃಹದಾಕಾರ
ಆರಕ್ಕೆರದಂತೆ, ಮೂರಕ್ಕಿಲಿಯದಂತೆ
ಅಡಿಗಡಿಗೆ ಭಯ ಹುಟ್ಟಿಸುತ್ತಿರುವುದು..!


ಸಂಭ್ರಮದ ಮೆರೆವಣಿಗೆ ಮುಗಿದು
ಮೌನ ಮೆರವಣಿಗೆ ಸಾಗುವವರೆಗೆ
ಜೊತೆ-ಜೊತೆಯಲಿ ಬೆಂಬಿಡದ
ಚಲನ-ವಲನದ ಪ್ರತಿಬಿಂಬ;
ಅತ್ತರೆ ಅತ್ತು, ನಕ್ಕರೆ ನಕ್ಕು
                   ಕೀಲಿ ಕೊಡುವ ಬದುಕ ಗಡಿಯಾರ !!

Saturday 19 May 2012

ಗಣೇಶ ಸ್ತುತಿ





ಗಜಮುಖದವನೇ ಹೇರಂಬಾ..
ನಿನ್ನಿಂದೆಲ್ಲವೂ ಪ್ರಾರಂಭ ..| ಪ  |
ಮೊದಲಿಗೆ ವಂದಿಪೆ ಹೇ ಗಣಪ 
ಪ್ರೇಮದಿ ಕಾಯೋ ನೀ ಬೆನಕ | ಅ.ಪ. |

ರಾವಣ ದರ್ಪವ ಮುರಿದವನೇ 
ಚಾಮರ ಕರ್ಣನೆ ಹರಸುತನೆ 
ಮೋದದಿ ಭಜಿಪೆನು ಹೇ ಗಣಪ
ಪಾಪವ ನೀಗಿಸು ನೀ ಬೆನಕ | ೧ |

ಮುನಿಗಳ ಮನದಲಿ ನೆನೆವವನೆ
ಭಕುತರ ಹೃದಯದಿ ನಲಿವವನೆ
ಕುಣಿಯುತ ಸ್ತುತಿಪೇನು ಹೇ ಗಣಪ
ಸನ್ಮತಿ ಕರುಣಿಸೋ ನೀ ಬೆನಕ | ೨ |

ಭಕುತಿಲಿ ಪೂಜಿಪೆ ನಾ ನಿನ್ನಾ
ದುರಿತವ ನೀಗಿಸೋ ನೀ ಎನ್ನಾ
ಸಕಲರ ಪೊರೆಯೋ ಹೇ ಗಣಪ
ಅಭಯವ ನೀಡೋ ನೀ ಬೆನಕ | ೩ |