Saturday 18 February 2017

ಬೆಂಗಳೂರಿನಲ್ಲಿ 20 ವರ್ಷ


ಇಂದು, ಕಣ್ಣಲ್ಲಿ ನೂರಾರು ಕನಸುಗಳನ್ನು ಹೊತ್ತು, ಕೆರೆ ನೀರು ಕುಡಿದು ಬದುಕುತ್ತಿದ್ದ ಒಬ್ಬ ಸಾಮಾನ್ಯ ಹಳ್ಳಿ ಹುಡುಗನಿಗೆ ಕಾವೇರಿ ನೀರು ಕುಡಿಯುವ ಭಾಗ್ಯ ದೊರೆತ ಸುದಿನ. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಗಿರಿ ನದಿ ತೊರೆಗಳ ನಡುವೆ ಓಡಾಡಿ ತನ್ನ PUC ವಿದ್ಯಾಭ್ಯಾಸ ಮುಗಿಸಿ ಹೊಟ್ಟೆ ಪಾಡಿಗಾಗಿ ಇನ್ನೇನು ದೇಶದ ಬಹು ಆಕರ್ಷಿತ ವಾಣಿಜ್ಯ ನಗರಿಗೆ ಹಾರಬೇಕು ಅನ್ನುವಂತ ಯೋಚನೆ ಮಾಡುತ್ತಿದ್ದ ಚಿಗುರು ಮೀಸೆಯ ಹುಡುಗನಿಗೆ ಕನ್ನಡಾಂಬೆ ಕೈ ಬೀಸಿ ರಾಜಧಾನಿಗೆ ಕರೆಸಿಕೊಂಡ ಸಂದರ್ಭ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆ ಇದ್ದರೂ ಮಾಡಲು ಅನುಕೂಲತೆ ಇರದ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿ ತನ್ನ ಮತ್ತು ತನ್ನನ್ನೇ ನಂಬಿದ ಮನೆಯವರ ನಿತ್ಯದ ಖರ್ಚಿಗೆ ಸಂಪಾದನೆಗೆ ತೊಡಗಿಸಿಕೊಳ್ಳಬೇಕು ಎನ್ನುವ ಯೋಚನೆ ಮಾಡುವಾಗ ದೊರೆತ ಅನಿರೀಕ್ಷಿತ ಅವಕಾಶವೇ ಬೆಂಗಳೂರಿಗೆ ಎಂಟ್ರಿ ಸಿಕ್ಕಿದ್ದು. ಈ ಅದೃಷ್ಟದ ವ್ಯಕ್ತಿ ಮತ್ತಾರು ಅಲ್ಲ, ನಾನೆ.

ಬೆಂಗಳೂರಿಗೆ ಬಂದು, ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಬದುಕಿನ ಎಲ್ಲಾ ಏರಿಳಿತಗಳನ್ನು ಎದುರಿಸಿ ಅನುಭವಿಸುತ್ತ ಇಂದಿಗೆ 20 ವರ್ಷ ಪೂರೈಸಿದ್ದೇನೆ. ಹಳ್ಳಿಯಿಂದ ಬಂದು ಎರಡು ದಶಕಗಳನ್ನು ರಾಜಧಾನಿಯಲ್ಲಿ ಕಳೆದಿದ್ದೇ ಇಂದಿನ ಖುಶಿಯ ಸಮಾಚಾರ. ಈ ನಡುವೆ ನಾಲ್ಕಾರು ಸಲ ಕಂಪನಿ ಬದಲಾಯಿಸಿ, ಸಂಸಾರಿಯಾಗಿ ಬದುಕಿನ ಹತ್ತಾರು ಮಜಲನ್ನು ಹತ್ತಿಳಿದು ಎಲ್ಲಾ ಅನುಭವ ಕಂಡಿದ್ದನ್ನು ಎಂದಿಗೂ ಮರೆಯಲಾಗದು. ಉದ್ಯೋಗದ ಜೊತೆಯಲ್ಲಿ ಹವ್ಯಾಸದ ಕಲೆ, ಸಾಹಿತ್ಯ, ಸಂಗೀತ ಮುಂತಾದವುಗಳಲ್ಲಿ ತೊಡಗಿಸಿಕೊಂಡು ನಿಮ್ಮಂತಹ ಅದೆಷ್ಟೋ ಮಿತ್ರವರ್ಗವನ್ನು ಸಂಪಾದಿಸಿದ್ದು ಇನ್ನೊಂದು ಮಹಾ ಸಾಧನೆ ಅನ್ನಬಹುದು.

ಈ ವಿಷಯ ಇಂದು ಇಲ್ಲಿ ನಿಮ್ಮ ಮುಂದೆ ಪ್ರಸ್ತಾಪಿಸುವ ಸಂದರ್ಭದಲ್ಲಿ, ನನಗೆ ಬೆಂಗಳೂರಿನ ದಾರಿ ತೋರಿಸಿ, ಯಾರೊಬ್ಬರೂ ಪರಿಚಯವಿಲ್ಲದ ಸಿಟಿಯಲ್ಲಿ ನಿಲ್ಲಲು ನೆಲೆ ಮಾಡಿಕೊಟ್ಟು ದುಡಿಯಲು ಒಂದು ಉದ್ಯೋಗ ನೀಡಿ, ಪಾಲನೆ-ಪೋಷಣೆ ಮಾಡಿದ ಎರಡು ಫ್ಯಾಮಿಲಿಗಳ ಪರಿಚಯ ಮಾಡದಿದ್ದರೆ ನಾನೊಬ್ಬ ಋಣಹೀನನಾಗುತ್ತೇನೆ. ನೆರೆಮನೆಯವರಾಗಿದ್ದು ನಮ್ಮೆಲ್ಲಾ ಸುಖ-ಕಷ್ಟಗಳಲ್ಲಿ ಭಾಗಿಯಾಗಿ ತಮ್ಮ ಮನೆಯವರಂತೆ ನೋಡಿಕೊಂಡು, ಮಾನವೀಯತೆಯ ಮೌಲ್ಯವನ್ನು ನಿಷ್ಟುರವಾಗಿ ಪಾಲಿಸಿಕೊಂಡು ಬರುತ್ತಿದ್ದ, ಎಕರೆಗಟ್ಟಲೆ ಜಮೀನಿನ ಒಡೆಯನಾದರೂ ಒಂದಿಷ್ಟು ಗರ್ವ ಅಹಂಕಾರ ಇಲ್ಲದೆ ಬದುಕುತ್ತಿದ್ದ ಶ್ರೀಮತಿ ಆಶಾ ಮತ್ತು ಶ್ರೀ ಭಾಸ್ಕರ್ ಉಬರಲೆ ನನ್ನ ಪಾಲಿಗೆ ದೊರೆತ ಮೊದಲ ಮಾರ್ಗದರ್ಶಕರು. ಈ ದಂಪತಿಗಳೇ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದವರು. (ಮೊದಲನೆಯ ಭಾವಚಿತ್ರ) ಇವರ ಪ್ರೋತ್ಸಾಹ, ಪ್ರೀತಿ, ಹಾರೈಕೆ, ಆದರ್ಶತೆಗಳು ಇಂದಿಗೂ ನನ್ನನ್ನು ಅವರ ಮಾರ್ಗದಲ್ಲಿ ನಡೆಯುವಂತೆ ಕಟಿಬದ್ಧನನ್ನಾಗಿ ಮಾಡಿದೆ.

ಹಾಗೇನೇ ಹಳ್ಳಿಯಿಂದ ಬಂದ ನನಗೆ ಆವರ ಮನೆಯಲ್ಲಿ ಉಳಿಯಲು ಅವಕಾಶ ಕೊಟ್ಟು, ಅವರ ಆಫೀಸಿನಲ್ಲಿ ಕೆಲಸ ಕೊಟ್ಟು ತನ್ನ ಮಗನಂತೆ ನೋಡಿಕೊಂಡ ನನ್ನ ಮೊದಲ ಬಾಸ್ ಶ್ರೀ ಎ. ಶಿವರಾವ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಎಸ್. ರಾವ್ ಅವರು ನನ್ನ ಪಾಲಿನ ಗುರುಗಳು, ಪಾಲಕರು, ಪೋಷಕರು. (ಎರಡನೆಯ ಭಾವಚಿತ್ರ). ಸಂಬಂಧಿಗಳೇ ಒದಗಿಬರದ ಸಮಯದಲ್ಲಿ ನನ್ನನ್ನು ಮನೆಯವನಂತೆ ನೋಡಿಕೊಂಡು ನನ್ನ ಏಳಿಗೆಗೆ ಸದಾ ಪ್ರೋತ್ಸಾಹ ನೀಡುತ್ತ ನನ್ನ ಇಂದಿನ ಭವಿಷ್ಯವನ್ನು ಅಂದು ರೂಪಿಸಿದ ಈ ಮಹಾನುಭಾವರ ಋಣ ಎಂದೂ ತೀರಿಸಲಾಗದ ಲೆಕ್ಕ. ಇವರ ಪ್ರತಿಯೊಂದು ಬುದ್ಧಿ ಮಾತುಗಳು, ಪ್ರೋತ್ಸಾಹ, ಮಾರ್ಗದರ್ಶನ ನನ್ನನ್ನು ನಾನೇಗಬೇಕೆಂದು ಯೋಜಿಸಿದ್ದೆನೊ ಆ ಗುರಿಯನ್ನು ಮುಟ್ಟುವಂತೆ ಪ್ರೇರೆಪಿಸಿತ್ತು, ಅದರಂತೆ ಅವರ ಸಹಕಾರವೂ ಸಿಕ್ಕಿತ್ತು, ಆಶೀರ್ವಾದವೂ ದೊರಕಿತ್ತು. 5 ವರ್ಷ ಅವರ ಗರಡಿಯಲ್ಲಿ ಪಳಗಿದ ನನಗೆ ಜೀವನದ ಎಲ್ಲಾ ಕಷ್ಟಗಳನ್ನು ಎದುರಿಸುವ ನೈತಿಕ ಸಾಮಾರ್ಥ್ಯ ತಿಳಿಸಿಕೊಟ್ಟ ಮಹಾನುಭಾವರು.

ಇಷ್ಟೆಲ್ಲಾ ವಿಷಯಗಳನ್ನು ನಿಮ್ಮಮುಂದೆ ಹಂಚಿಕೊಳ್ಳಲು ಬಲವಾದ ಕಾರಣ ಏನಂದ್ರೆ, ನಾವು ಮಾನವರು ಮಾಡಿದ ಉಪಕಾರವನ್ನು ಮರೆತುಬಿಡುತ್ತೇವೆ. ಮುಂದೆ ಬೆಳೆದು ನಿಂತಾಗ ಬೆಳೆಸಿದವರನ್ನೆ ತೆಗಳುತ್ತೇವೆ. ಹಾಗಾಗಬಾರದು, ನಮಗೆ ಪ್ರೀತಿ ತೋರಿಸಿದವರನ್ನು ನಾವು ಎಂದೂ ಮರೆಯಬಾರದು. ಅವರ ಮನಸಿಗೆ ನೋವು ನೀಡದೆ ಸದಾ ಅವರ ಉಪಕಾರವನ್ನು ಸ್ಮರಿಸುತ್ತಾ ಸಾಧಿಸಿ ಬದುಕಿ ತೋರಿಸಬೇಕು. ಅವರನ್ನು ಗೌರವಿಸಿ ಅವರು ಹೆಮ್ಮೆಯಿಂದ ಹೇಳುಕೊಳ್ಳುವಂತಹ ಸಂಬಂಧ ಇಟ್ಟುಕೊಳ್ಳಬೇಕೆಂಬುದಷ್ಟೇ ನನ್ನ ಆಶಯ.

ನರೇಂದ್ರ ಕಬ್ಬಿನಾಲೆ

No comments:

Post a Comment